Monday, March 24, 2008

4. ಅಲೆ ಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ

ಆ ರಾತ್ರಿ ಚಿರಾಯುವಿಗೆ ನಿದ್ದೆ ಬರಲಿಲ್ಲ.
ಶೇಷುವಿಗೆ ಅರ್ಧ ಗಂಟೆಗೊಂದು ಟೀ ಮಾಡಿಕೊಡುವಂತೆ ಹೇಳಿ, ಬಾಲ್ಕನಿಗೆ ಬಂದು ಕುಳಿತುಕೊಂಡ. ಆರಾಮ ಖುರ್ಚಿಯಲ್ಲಿ ಕೂತವನಿಗೆ ನೆನಪಾದದ್ದು ಅಪ್ಪ. ಇದೇ ಹಳ್ಳಿಯ ರಂಗನಾಥೇಶ್ವರನ ದೇವಾಲಯದಲ್ಲಿ ಅರ್ಚಕ, ಮೊಕ್ತೇಸರ ಎಲ್ಲವೂ ಆಗಿದ್ದ ಸಿಡುಕು ಮೋರೆಯ ಅಪ್ಪ. ಅಪ್ಪ ದೇವರ ಹತ್ತಿರವೂ ಹಾಗೇ ಸಿಡುಕುತ್ತಿದ್ದರಾ, ಅವರಿಗೂ ದೇವರಿಗೂ ಸಮಾನ ಮಾಧ್ಯಮ ಏನಿತ್ತು. ಯಾರೋ ಕಲಿಸಿಕೊಟ್ಟ ಮಂತ್ರಗಳಿಂದ ದೇವರನ್ನು ಒಲಿಸಿಕೊಳ್ಳಬಲ್ಲೆ ಅನ್ನುವ ಅಹಂಕಾರ ಅವರಲ್ಲಿತ್ತಾ. ಅಥವ ಅದೊಂದು ವೃತ್ತಿ ಅಂದುಕೊಂಡು ಅವರು ಪೂಜೆ ಮಾಡುತ್ತಿದ್ದರಾ.
ಚಿರಾಯುವಿಗೆ ಅಂಥ ಪ್ರಶ್ನೆಗಳು ಹುಟ್ಟತೊಡಗಿದ ಹೊತ್ತಿಗೆ ಅಪ್ಪನ ಜೊತೆ ಮಾತಾಡಬೇಕು ಅನ್ನಿಸಿರಲಿಲ್ಲ. ಅವರು ಪ್ರಶ್ನೆಗಳ ವಿರೋಧಿ. ಪ್ರಶ್ನೆ ಕೇಳುವುದು ಅಪರಾಧ ಮತ್ತು ಅನಗತ್ಯ ಎಂಬಂತೆ ವರ್ತಿಸುತ್ತಿದ್ದವರು. ಹೀಗಾಗಿ ಯಾವ ಪ್ರಶ್ನೆಗೂ ಅವರು ಉತ್ತರಿಸುತ್ತಿರಲೂ ಇಲ್ಲ. ತನ್ನ ವಿಚಾರದಲ್ಲಿ ಅವರು ಕೊಂಚ ಉದಾರವಾಗಿಯೇ ವರ್ತಿಸಿದರು ಅಂತ ಆಗಾಗ್ಗೆ ಚಿರಾಯುವಿಗೆ ಅನ್ನಿಸುವುದುಂಟು. ತನಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅಪ್ಪನ ಕಾಲಿಗೆ ಬೀಳಬೇಕು, ಪ್ರಶಸ್ತಿಯನ್ನು ರಂಗನಾಥೇಶ್ವರ ದೇವಸ್ಥಾನಕ್ಕೆ ಒಯ್ದು ಪೂಜೆ ಮಾಡಿಸಬೇಕು ಅಂತ ತೀವ್ರವಾಗಿ ಅನ್ನಿಸಿತ್ತು. ಹಾಗೆ ಮಾಡಿದ್ದರೆ ದೊಡ್ಡ ವಿವಾದವಾಗುತ್ತಿತ್ತು. ಹಾಗಂತ ತಾನು ಅನ್ನಿಸಿದ್ದನ್ನು ಮಾಡದೇ ಬಿಟ್ಟವನಲ್ಲ. ಆದರೆ ಅಪ್ಪನ ಹತ್ತಿರ ಪ್ರಶಸ್ತಿ ಬಂದ ವಿಚಾರ ಹೇಳಿದಾಗ ಅವರು ಸಂತೋಷಪಟ್ಟಂತೇನೂ ಕಾಣಿಸಲಿಲ್ಲ.
ಅಪ್ಪ ತಾನು ಬರೆದದ್ದನ್ನು ಓದಿಯೇ ಇಲ್ಲ ಅಂದುಕೊಂಡಿದ್ದ ಚಿರಾಯು. ಆದರೆ ಅಪ್ಪ ಎಲ್ಲವನ್ನೂ ಓದುತ್ತಾರೆ ಕಣೋ, ಓದಿಲ್ಲದ ಹಾಗೆ ನಟಿಸುತ್ತಾರೆ. ನಿನ್ನ ಮೇಲೆ ಅವರಿಗೆ ಒಳಗೊಳಗೇ ಹೆಮ್ಮೆ, ಅಭಿಮಾನ ಎಲ್ಲ ಇದೆ. ಆದರೆ ಅದನ್ನು ಹೊರಗೆ ತೋರಿಸಿಕೊಳ್ಳಲು ಅವರ ಹಮ್ಮು ಬಿಡುವುದಿಲ್ಲ. ಗೊರಟಿರುವ ಕಾಡು ಮಾವಿನಕಾಯಿಯಂಥ ಸ್ವಭಾವ ಅವರದು. ಮಾತೆಲ್ಲ ನಾರು ನಾರು. ಮೇಲ್ನೋಟಕ್ಕಷ್ಟೇ ಒರಟರು ಅಂತ ಅಮ್ಮ ಒಂದೆರಡು ಸಾರಿ ಚಿರಾಯುವಿನ ಸಮಾಧಾನಕ್ಕೆ ಹೇಳಿದ್ದಿದೆ. ನಿಮ್ಮ ಮಗನಿಗೆ ಅತ್ಯಂತ ಚಿಕ್ಕ ವಯಸ್ಸಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ ಅಂತ ಶಾಮಣ್ಣ ಮೇಷ್ಟ್ರು ಹೇಳಿದಾಗ ಅಪ್ಪ ನಗಲೂ ಇಲ್ಲವಂತೆ. ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ನಡೆದು ಬಿಟ್ಟಿದ್ದರಂತೆ. ನಮ್ಮ ಯಾವ ಸಾಧನೆಯೂ ಅವರಿಗೆ ಸಂತೋಷ ಕೊಡೋದಿಲ್ಲ ಕಣೋ. ಅಮ್ಮ ಅವರಿಂದ ಸುಖಪಟ್ಟಿದ್ದು ಅಷ್ಟರಲ್ಲೇ ಇದೆ ಎಂದು ಅಕ್ಕ ಸರಸ್ವತಿ ಆಗಾಗ ಹೇಳಿ ಕಣ್ಣೀರು ಹಾಕುವುದುಂಟು.
ಚಿರಾಯು ಅದರಿಂದೇನೂ ತಲೆಕೆಡಿಸಿಕೊಂಡಿರಲಿಲ್ಲ. ಅಪ್ಪನ ಗುಣದಲ್ಲಿ ಒಂದಂಶ ತನಗೂ ಬಂದಿದೆಯೇನೋ ಅಂತಲೂ ಅವನಿಗೆ ಆಗಾಗ ಅನ್ನಿಸಿದ್ದುಂಟು. ತಾನೂ ಕೂಡ ಬೇರೆಯವರ ಬಗ್ಗೆ ಅಷ್ಟಾಗಿ ಚಿಂತೆ ಮಾಡಿದವನೇ ಅಲ್ಲ. ತನ್ನ ಪ್ರೀತಿ, ವಾತ್ಸಲ್ಯ, ಆತ್ಮೀಯತೆ, ಸಾಂತ್ವನ ಎಲ್ಲವೂ ಒಳಗಿನಿಂದ ಹುಟ್ಟಿದ್ದಾಗಿರದೇ, ಎಷ್ಟೋ ಸಂದರ್ಭದಲ್ಲಿ ಬರೀ ತೋರಿಕೆಯದಷ್ಟೇ ಆಗಿತ್ತಲ್ಲ ಅಂತ ಯೋಚಿಸುತ್ತಾನೆ ಚಿರಾಯು.
ಸಾಹಿತ್ಯದಲ್ಲಿ ಆದದ್ದೂ ಅದೇ. ಇನ್ನೊಬ್ಬರ ಕೃತಿಯನ್ನು ಮೆಚ್ಚಿ ಮಾತಾಡುವಾಗಲೂ ಅಲ್ಲಿ ತನ್ನ ಪ್ರತಿಭೆ, ಪಾಂಡಿತ್ಯವೇ ಕಾಣಬೇಕು ಎಂಬಂತೆ ಮಾತಾಡುತ್ತಿದ್ದ ಚಿರಾಯು. ಹೀಗಾಗಿ ತಾನು ಯಾರ ಬಗ್ಗೆ ಮೆಚ್ಚಿ ಮಾತಾಡಿದರೂ ಅಲ್ಲಿ ಕಾಣಿಸುತ್ತಿದ್ದದ್ದು ತಾನು ಮಾತ್ರ. ತನ್ನ ಸಮಕಾಲೀನರನ್ನೋ ತನಗಿಂತ ಪ್ರತಿಭಾವಂತರನ್ನೋ ಕುರಿತು ಬರೆದಾಗ ಕೂಡ ಓದುಗರು ಚಿರಾಯು ಎಷ್ಟು ಚೆನ್ನಾಗಿ ಬರೆಯುತ್ತಾನೆ ಎಂದು ಹೊಗಳುತ್ತಿದ್ದರೇ ವಿನಾ, ತಾನು ಸೂಚಿಸಿದ ಪದ್ಯವನ್ನು ಓದುತ್ತಿರಲಿಲ್ಲ ಎಂದು ಗೊತ್ತಾದದ್ದೇ ತನಗೆ ಕಾಲಜ್ಞಾನಿಯ, ಪ್ರವಾದಿಯ ಪಟ್ಟಕ್ಕೇರಿದಷ್ಟು ಸಂತೋಷವಾಗಿತ್ತಲ್ಲ. ತನ್ನ ಮಾತುಗಳು ಪ್ರವಾದಿಯ ಮಾತುಗಳಲ್ಲ, ದಾರ್ಶನಿಕನದು ಎಂಬಂತೆ ಸ್ವೀಕರಿಸುತ್ತಿದ್ದವರ ಸಾಲೂ ದೊಡ್ಡದಿತ್ತು.
ಹಳೆಯದರಿಂದ ಕಳಚಿಕೊಂಡು, ತಾನು ಇದುವರೆಗೆ ಬರೆದದ್ದರ ನೆರಳು ಕೂಡ ಬೀಳದಂತೆ ಬರೆಯಬೇಕು ಎಂದು ಕೂತವನಿಗೆ ಮತ್ತೆ ಮತ್ತೆ ಇದೆಲ್ಲ ಯಾಕೆ ನೆನಪಾಗುತ್ತವೆ ಎಂದು ಗೊತ್ತಾಗದೇ, ಚಿರಾಯು ಚಡಪಡಿಸಿದ. ಶೇಷು ತಂದಿಟ್ಟ ಮೂರನೇ ಟೀ ತಣ್ಣಗಾಗುತ್ತಿತ್ತು. ತಾನೇ ಬರೆದದ್ದನ್ನು ಮತ್ತೊಮ್ಮೆ ಓದಬೇಕು ಅನ್ನಿಸಿತು. ಹಾಗೆ ಓದುವ ಮೂಲಕ ಅದರಿಂದ ಬಿಡುಗಡೆ ಪಡೆಯುವುದು ಸಾಧ್ಯವಾದೀತೇನೋ. ತನ್ನ ಆರಂಭದ ಕತೆಗಳಾಗಲೀ, ಕವಿತೆಗಳಾಗಲೀ ತನಗೆ ನೆನಪಿಲ್ಲ. ಅವ್ಯಕ್ತ ಕಾದಂಬರಿಯಲ್ಲಿ ಬರುವ ವಿಧವೆಯ ಪಾತ್ರದ ಬಗ್ಗೆ ಸುಶೀಲ್ ಸಹಾನಿ ಮೆಚ್ಚಿ ಮಾತಾಡುತ್ತಿದ್ದ. ಆ ಪಾತ್ರದ ಚಹರೆಯೇ ಮರೆತುಹೋಗಿದೆ.
ಚಿರಾಯು ಶೇಷುವನ್ನು ಕರೆದು ನಾಳೆ ಬೆಳಗ್ಗೆ ಬೆಂಗಳೂರಿಗೆ ಹೋಗಿ, ತನ್ನ ಅಷ್ಟೂ ಪುಸ್ತಕಗಳನ್ನು ತಂದುಬಿಡುವಂತೆ ಸೂಚಿಸಿದ. ಹೋಗಿ ಬರುವುದಕ್ಕೆ ಒಂದು ದಿನವಾಗುತ್ತದೆ ಎಂದು ಆತಂಕಗೊಂಡ ಶೇಷುವಿಗೆ, ಏನೂ ಪರವಾಗಿಲ್ಲ. ನಾನೇ ಅಡುಗೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ಕೊಟ್ಟ. ಯಾವುದಕ್ಕೂ ಒಂದಷ್ಟು ಬ್ರೆಡ್ಡು ಮೊಟ್ಟೆ ತಂದಿಟ್ಟಿರು. ಹಣ್ಣು ಸೌತೆಕಾಯಿಯೂ ಇರಲಿ ಎಂದ. ಶೇಷು ತಲೆಯಾಡಿಸಿ ಹೊರಟು ಹೋದ.
ಬದಕುವ ಮೂಲಕ ಬದುಕಿನಿಂದ ಬಿಡುಗಡೆ ಪಡೆಯುವ ಹಾಗೆ, ಓದುವ ಮೂಲಕ ಬರೆದದ್ದರಿಂದ ಮುಕ್ತಿ ಹೊಂದಲು ಸಾಧ್ಯವಾ. ತಾನೀಗ ಏನು ಬರೆದರೂ ಅದು ತಾನು ಈ ಹಿಂದೆ ಬರೆದದ್ದಕ್ಕೆ ವಿರುದ್ಧವಾಗಿ ಕಾಣಿಸುತ್ತದಾ. ಈ ವಿರೋಧಾಭಾಸವನ್ನು ಯಾರಾದರೂ ಗುರುತಿಸುತ್ತಾರಾ. ಕನ್ನಡದಲ್ಲಿ ಅಂಥ ಜಾಣರಿಲ್ಲ. ತನ್ನನ್ನು ಚುಚ್ಚುವುದಕ್ಕೆಂದು ವಿಮಲೇಂದ್ರ ಅಂಥ ಪ್ರಯತ್ನ ಮಾಡಿದರೂ ಮಾಡಬಹುದು. ಅವನ ಟೀಕೆಗಳಿಗೆ ನಕ್ಕು ಸುಮ್ಮನಾಗಬಹುದು. ಆದರೆ, ರಾಷ್ಟ್ರೀಯ ಅಂತಾರಾಷ್ಟ್ರೀಯ ಸಾಹಿತ್ಯಕ ವಲಯದ್ದೇ ಭಯ. ಇಂಗ್ಲಿಷ್ ಪತ್ರಿಕೆಗಳಲ್ಲಿ ಅವು ಪ್ರಕಟವಾಗುತ್ತವೆ. ಚಾನಲ್ಲುಗಳಲ್ಲಿ ಬರುತ್ತವೆ.
ಚಿರಾಯು ಕಣ್ಮುಚ್ಚಿ ಯೋಚಿಸಿದ.
ಸದ್ಯದ ತಲ್ಲಣ ಮತ್ತು ನಿಷ್ಕ್ರಿಯತೆಯಿಂದ ಪಾರಾಗಬೇಕು ಅನ್ನಿಸಿತು. ಕಾಡು ಹರಟೆಯೊಂದೇ ಅದಕ್ಕೆ ದಾರಿ ಅಂದುಕೊಂಡು ಶೇಷುವಿನ ಕಡೆ ತಿರುಗಿದ. ಮೌನ ಅರ್ಥವಾದವನ ಹಾಗೆ ಶೇಷು ಮೊಬೈಲು ತಂದುಕೊಟ್ಟ.
ರಾತ್ರಿ ಎರಡೂವರೆ ಗಂಟೆಯಾಗಿದೆ ಅನ್ನುವುದನ್ನು ಮನಸ್ಸಿಗೆ ತಂದುಕೊಳ್ಳುತ್ತಲೇ, ಆ ಹೊತ್ತಲ್ಲಿ ಅವಳು ಮಲಗಿರುತ್ತಾಳೆ ಎಂದು ಗೊತ್ತಿದ್ದೂ, ಯಾಮಿನಿಯನ್ನು ನೋಯಿಸಲಿಕ್ಕಾದರೂ ತಾನು ಹೀಗೆ ಮಾಡಬೇಕು ಅಂದುಕೊಂಡು ಊರ್ಮಿಳಾ ದೇಸಾಯಿಯ ನಂಬರ್ ಡಯಲ್ ಮಾಡಿದ.
ಮೂರನೇ ರಿಂಗಿಗೆ ಅತ್ತ ಕಡೆಯಿಂದ ಬಿಸಿ ಕಾಫಿಯಂಥ ದನಿಯೊಂದು ಚಿರೂ ಅಂದಿತು.

Saturday, March 22, 2008

3. ಒಡೆದುಬಿದ್ದ ಕೊಳಲು ನಾನು..

ರಾತ್ರಿ ತಿಂಗಳ ಬೆಳಕಿತ್ತು.
ತಿಂಗಳ ಬೆಳಕೆಂದರೆ ಚಿರಾಯುವಿಗೆ ಇಷ್ಟ. ಆ ಬೆಳಕಿನಲ್ಲಿ ಯಾವುದೂ ನಿಚ್ಚಳವಾಗಿ ಕಾಣಿಸುವುದಿಲ್ಲ. ಜಗತ್ತಿನ ಕುರೂಪಗಳನ್ನೆಲ್ಲ ಮುಚ್ಚುವ ಶಕ್ತಿ ಬೆಳದಿಂಗಳಿಗಿದೆ. ಅಷ್ಟೇ ಅಲ್ಲ, ಅದು ಎಲ್ಲವನ್ನೂ ಒಂದೇ ಬಣ್ಣಕ್ಕೆ ತಿರುಗಿಸುತ್ತದೆ. ಕಮ್ಯೂನಿಸಂ ಬಿಟ್ಟರೆ ಹಾಗೆ ಒಂದೇ ಬಣ್ಣಕ್ಕೆ ತಿರುಗಿಸುವ ಶಕ್ತಿಯಿರುವುದು ಬೆಳದಿಂಗಳಿಗೆ ಮಾತ್ರ ಅನ್ನುವುದು ಹೊಳೆದು ಚಿರಾಯು ಸಣ್ಣಗೆ ನಕ್ಕ.
ಆ ಬೆಳದಿಂಗಳಲ್ಲಿ ನಡೆಯುತ್ತಿದ್ದ ರಾತ್ರಿಗಳು ನೆನಪಾದವು. ಜೊತೆಗೆ ಚಿಕ್ಕಮ್ಮ ಭಾಗೀರಥಿ ಇರುತ್ತಿದ್ದರು. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಅದೆಲ್ಲಿಂದಲೋ ಶಶಿಧರ ಪ್ರತ್ಯಕ್ಷವಾಗುತ್ತಿದ್ದ. ಅವನು ಬರುತ್ತಿದ್ದ ಹಾಗೆ ಚಿಕ್ಕಮ್ಮ ತನ್ನ ಕೈಗೆ ಒಂದಷ್ಟು ಕಡಲೇಬೀಜ ತುರುಕಿ ಸ್ವಲ್ಪ ಮುಂದೆ ನಡೆಯೋ ಅನ್ನುತ್ತಿದ್ದಳು. ಯಾಕೆ ಅಂತಲೂ ಕೇಳದೇ ತಾನು ಮುಂದಕ್ಕೆ ಹೋಗಿ ಬಿಡುತ್ತಿದ್ದೆ. ಚಿಕ್ಕಮ್ಮನೂ ಶಶಿಧರನೂ ತನ್ನನ್ನು ಹುಂಬ ಅಂದುಕೊಳ್ಳುತ್ತಿದ್ದರೋ ಏನೋ. ಆದರೆ ತನಗೆ ಆಗಲೇ ಎಲ್ಲಾ ಅರ್ಥವಾಗುತ್ತಿತ್ತಲ್ಲ. ಅವರು ಕೈ ಕೈ ಹಿಡಿದುಕೊಂಡು ನಡೆಯುತ್ತಿದ್ದದ್ದು, ಮಾತಾಡುತ್ತಾ ಆಡುತ್ತಾ ಒಬ್ಬರಿಗೊಬ್ಬರು ಆತುಕೊಂಡು ನಡೆಯುತ್ತಿದ್ದದ್ದು, ಚಿಕ್ಕಮ್ಮ ಸಣ್ಣಗೆ ನರಳುತ್ತಿದ್ದದ್ದು, ಒಮ್ಮೆಯೂ ಅವರೇನು ಮಾಡುತ್ತಿದ್ದಾರೆ ಅಂತ ತಿರುಗಿ ನೋಡುವ ಕುತೂಹಲ ಕೂಡ ಹುಟ್ಟಿರಲಿಲ್ಲ ತನ್ನಲ್ಲಿ. ಅದಕ್ಕಿಂತ ಹೆಚ್ಚಾಗಿ ಅವರೇನು ಮಾಡುತ್ತಿದ್ದಾರೆ ಅನ್ನುವುದು ಸ್ಪಷ್ಟವಾಗಿ ಗೊತ್ತಿದೆ ಎಂಬ ದುರಹಂಕಾರ. ಇವತ್ತಿಗೂ ಅದೇ ದುರಹಂಕಾರವೇ ತನ್ನನ್ನು ಆಳುತ್ತಿದೆಯಾ. ಸಾಹಿತಿಗೆ ವಿನಯ ಇರಬೇಕು ಎಂದು ಅನೇಕರು ಹೇಳಿದ್ದು ನೆನಪಾಗಿ ಚಿರಾಯು ತನ್ನಷ್ಟಕ್ಕೇ ವಿನಯವಂತೆ ವಿನಯ, ಬದನೆಕಾಯಿ ಎಂದು ಉಸುರಿಕೊಂಡ.
ಬೆಳದಿಂಗಳು ಎಲ್ಲವನ್ನೂ ಅರಗಿಸಿಕೊಂಡಂತೆ ಹಬ್ಬಿತ್ತು. ಚಂದ್ರನಿಗೇನಾದರೂ ಕತೆ ಬರೆಯುವುದು ಗೊತ್ತಿದ್ದರೆ ಎಂತೆಂಥಾ ಕತೆ ಹೇಳುತ್ತಿದ್ದನೋ ಏನೋ. ತುಂಬ ರೋಮ್ಯಾಂಟಿಕ್ ಶೈಲಿಯಲ್ಲೊಂದು ಕಾದಂಬರಿ ಬರೆದರೆ ಹೇಗೆ. ಅಖಂಡ ಪ್ರೇಮವನ್ನು, ಅಪೂರ್ವ ಸಮಾಗಮವನ್ನು, ಸುರತದ ಸಂಭ್ರಮಗಳನ್ನು, ಸಲ್ಲಾಪಗಳನ್ನು, ರಕ್ತಸಿಕ್ತ ರಾತ್ರಿಗಳನ್ನು, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ಹಾದರ, ಮೈಥುನ, ಪ್ರಣಯೋತ್ಸವ, ವಿರಹ ಎಲ್ಲವನ್ನೂ ಕಂಡರೂ ಚಂದ್ರ ತನ್ನ ನಗುವನ್ನು ಕಳಕೊಂಡಿಲ್ಲ ಅನ್ನುವುದೇ ಬದುಕುವುದಕ್ಕೆ ಸಕಾರಣ ಎಂದು ಕಾದಂಬರಿ ಆರಂಭಿಸಿ ಎಲ್ಲರನ್ನು ಬೆಚ್ಚಿಬೀಳಿಸಿದರೆ ಹೇಗೆ, ಬೆಳದಿಂಗಳ ಕತೆಗಳು ಅಂತ ಒಂದು ಸರಣಿ ಬರೆಯಬೇಕು. ಚಂದ್ರ ಹೇಳಿದ ಕತೆಗಳಾಗಿ ಅವು ಕಾಣಿಸಬೇಕು. ಹೀಗೆ ಯೋಚನೆ ದಿಕ್ಕು ತಪ್ಪುತ್ತಿರುವುದನ್ನು ಗಮನಿಸಿ ಚಿರಾಯುವಿಗೆ ಬೇಜಾರಾಯಿತು.
ಒಂದು ಸಾಲು ಸಿಕ್ಕರೆ ಕವಿತೆ ಬರೆದುಬಿಡುತ್ತೇನೆ ಅನ್ನುತ್ತಿದ್ದ ಗೆಳೆಯ ಗೋಪಿ. ಮೊದಲ ಸಾಲು ಹೊಳೆದರೆ ಸಾಕು ಕತೆ ತಾನಾಗೇ ಬೆಳೆಯುತ್ತಾ ಹೋಗುತ್ತದೆ ಅಂತ ನಾನು ಹೇಳುತ್ತಿದ್ದೆ. ಯಾವತ್ತೂ ಕತೆ ಬರೆಯುವುದಕ್ಕೆ ತಿಣುಕಿದವನೇ ಅಲ್ಲ. ಪೆನ್ನು ಪೇಪರು ಮುಂದಿಟ್ಟು ಕೂತರೆ ಹದಿನಾಲ್ಕು ಪುಟದ ಕತೆ ಬರೆದು ಮುಗಿಸಿಯೇ ಏಳುತ್ತಿದ್ದದ್ದು. ಅದನ್ನು ಯಾವತ್ತೂ ಮತ್ತೊಮ್ಮೆ ಓದಿದ್ದೂ ಇಲ್ಲ, ತಿದ್ದಿದ್ದೂ ಇಲ್ಲ. ಹಾಗೆ ತಿದ್ದುವವರನ್ನು ಕಂಡರೆ ಅಸೂಯೆ ಮತ್ತು ರೇಜಿಗೆ. ಬರಹವೆಂದರೆ ಸಂಭೋಗದ ಹಾಗೆ. ಆ ಕ್ಷಣಕ್ಕೆ ಮದನ ಎಷ್ಟು ಕರುಣಿಸುತ್ತಾನೋ ಅಷ್ಟು.
ಒಳಗೆ ಮೊಬೈಲು ಗುನುಗುನಿಸಿತು. ಯಾಮಿನಿಗೆ ಇಷ್ಟವಾದ ಹಾಡು ರಿಂಗ್-ಟೋನು. ಅವಳನ್ನು ನೆನಪಿಸಿಕೊಳ್ಳಲು ಎಷ್ಟೊಂದು ಮಾರ್ಗ. ರಿಂಗ್-ಟೋನು, ಸ್ಕ್ರೀನ್ ಸೇವರು, ಅವಳೇ ಕೊಟ್ಟ ವಾಚು.ಹಿಂದಿನ ಕಾಲದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಇಷ್ಟೊಂದು ಮಾರ್ಗಗಳೇ ಇರಲಿಲ್ಲ. ತನ್ನ ಬಾಲ್ಯದಲ್ಲೇನಿತ್ತು. ತುಂಬ ಭಾವುಕವಾಗಿ ಯೋಚಿಸಿದರೆ ಅವಳ ಜುಮುಕಿ, ಕಾಲುಗೆಜ್ಜೆ, ಉಂಗುರ- ಇಷ್ಟನ್ನು ಬಿಟ್ಟರೆ ಬೇರೆ ರೂಪಕಗಳೇ ಇರಲಿಲ್ಲ. ಅವಳು ಕಿಟಿಕಿಯಿಂದಲೋ ಬಾಗಿಲ ಸಂದಿಯಿಂದಲೋ ನೋಡುತ್ತಿರುವ ಚಿತ್ರ, ಮುಟ್ಟಾದಾಗ ಮೊಣಕಾಲಿಗೆ ಕೈ ಊರಿ ಕೂತ ಚಿತ್ರ. ಈಗ ರಹಸ್ಯಗಳೇ ಇಲ್ಲ.
ಶೇಷು ಫೋನ್ ತಂದು ಕೊಟ್ಟ. ಶ್ರದ್ಧಾ ಫೋನ್ ಮಾಡಿದ್ದಳು. ಕಾದಂಬರಿಯ ಸಾರಾಂಶ ಹೇಳಿದರೆ ತ್ರಿಲೋಕನ ಹತ್ತಿರ ಕವರ್ ಪೇಜ್ ಡಿಸೈನ್ ಮಾಡಿಸಿಬಿಡುತ್ತೇನೆ. ಈಗಿಂದೀಗಲೇ ಪ್ರಚಾರ ಶುರು ಮಾಡಿದರೆ ಚೆನ್ನಾಗಿರುತ್ತೆ. ಒಂದು ಹೈಪ್ ಕ್ರಿಯೇಟ್ ಆಗಬೇಕು. ನಿನ್ನೆ ಟೀವಿ ನೋಡಿದ್ಯಾ ಕೇಳಿದಳು. ಇಲ್ಲ ಅಂತ ಚಿರಾಯು. ನೋಡಬೇಕಿತ್ತು. ಬಿಬಿಸಿಯಲ್ಲಿ ನಿನ್ನ ಅಜ್ಞಾತವಾಸದ ಬಗ್ಗೆ ಒಂದು ರಿಪೋರ್ಟು ಬಂದಿತ್ತು. ಎಲ್ಲೋ ಕೂತು ಕಾದಂಬರಿ ಬರೆಯುತ್ತಿದ್ದೀಯ ಅಂತ ಸುದ್ದಿ ಮಾಡಿದ್ದಾರೆ ಅಂದಳು.
ಚಿರಾಯುವಿಗೆ ರೇಗಿತು. ಕಾದಂಬರಿಯ ಸಾರಾಂಶ ಹಾಗೆಲ್ಲ ಹೇಳುವುದಕ್ಕಾಗೋಲ್ಲ. ಏನಂತ ತಿಳ್ಕೊಂಡಿದ್ದೀಯಾ ಅಂತ ಬೈಯಬೇಕು ಅಂದುಕೊಂಡ. ಮನಸ್ಸಾಗಲಿಲ್ಲ. ಶ್ರದ್ಧಾ ಪಕ್ಕಾ ಪ್ರೊಫೆಷನಲ್. ಅವಳಿಗೆ ಸೃಜನಶೀಲ ಸಂಕಟಗಳ ಬಗ್ಗೆ ಗೊತ್ತಿಲ್ಲ. ನಿಮಿಷಕ್ಕೆ ನಲವತ್ತು ಪದ ಟೈಪ್ ಮಾಡಬಲ್ಲವನು ಗಂಟೆಗೆ 2400 ಪದ ಟೈಪ್ ಮಾಡುತ್ತಾನೆ. ದಿನಕ್ಕೆ ನಾಲ್ಕು ಗಂಟೆ ಬರೆದರೂ ಸುಮಾರು ಹತ್ತು ಸಾವಿರ ಪದಗಳಾಗುತ್ತವೆ. ಒಂದು ಕಾದಂಬರಿಗೆ ಹೆಚ್ಚೆಂದರೆ ಅರುವತ್ತು ಸಾವಿರ ಪದಗಳಿದ್ದರೆ ಸಾಕು. ಯೋಚಿಸಿ ಬರೆದರೂ ಇಪ್ಪತ್ತು ದಿನಗಳಲ್ಲಿ ಕಾದಂಬರಿ ಮುಗಿಯಬೇಕು. ಕಲಾವಿದರು ಚಿತ್ರ ಮಾಡುವುದಕ್ಕೆ ಹೆಚ್ಚು ಸಮಯ ತಗೊಳ್ಳುತ್ತಾರೆ. ಹೀಗೆ ಲೆಕ್ಕಾ ಹಾಕುತ್ತಾಳೆ ಅವಳು.
ಕೊನೆಗೆ ಹೋಗ್ಲಿ ಬಿಡೋ ಟೈಟಲ್ಲಾದ್ರೂ ಹೇಳು ಅಂದಳು. ಪ್ಲೀಸ್, ಒಂದೆರಡು ದಿನ ಏನೂ ಕೇಳಬೇಡ. ಕಾದಂಬರಿ ಹರಳುಗಟ್ಟುತ್ತಾ ಇದೆ. ನಾನೇ ಫೋನ್ ಮಾಡಿ ಹೇಳ್ತೀನಿ. ಪ್ರಚಾರ ಎಲ್ಲಾ ಮಾಡಿಸೋದಕ್ಕೆ ಹೋಗಬೇಡ ಅಂತ ಗೋಗರೆಯುವ ದನಿಯಲ್ಲಿ ಹೇಳಿದ ಚಿರಾಯು. ಶ್ರದ್ಧಾ ಅರ್ಥ ಮಾಡಿಕೊಂಡವಳಂತೆ ಸರಿ ಡಾರ್ಲಿಂಗ್. ನಿಧಾನಕ್ಕೆ ಬರಿ. ನಾನೇನೂ ಅವಸರ ಮಾಡೋಲ್ಲ ಅಂದಳು.
ಶೇಷು ಕೈಗೆ ಫೋನ್ ಕೊಡುತ್ತಾ ಇನ್ನು ಮೇಲೆ ಯಾರ ಫೋನ್ ಬಂದರೂ ನನಗೆ ಕೊಡಬೇಡ. ಅವರ ಹೆಸರು ಬರೆದಿಡು. ಒಂದು ಹೊತ್ತಲ್ಲಿ ನಾನೇ ಅವರಿಗೆ ಫೋನ್ ಮಾಡಿ ಮಾತಾಡ್ತೀನಿ ಅಂದ. ಶೇಷು ತಲೆಯಾಡಿಸಿದ.
ಮೋಡವೊಂದು ಚಂದ್ರನನ್ನು ಮರೆ ಮಾಡಿದ್ದರಿಂದಲೋ ಏನೋ ಬೆಳದಿಂಗಳು ಮಸುಕಾಗಿತ್ತು. ಗುಡ್ಡ ಬಯಲು ಒಂದಾಗಿತ್ತು. ಮತ್ತಷ್ಟು ನಿಗೂಢವಾಗಿತ್ತು. ಬೆಳದಿಂಗಳಿಗಿಂತ ಒಳ್ಳೆಯ ಕತೆಯಾಗಲೀ ಕವಿತೆಯಾಗಲೀ ಇರುವುದಕ್ಕೆ ಸಾಧ್ಯವೇ ಇಲ್ಲ ಅಂದುಕೊಳ್ಳುತ್ತಾ ಚಿರಾಯು ಎದ್ದು ನಿಂತ.
ಇದ್ದಕ್ಕಿದ್ದಂತೆ ಬೆಳದಿಂಗಳಲ್ಲಿ ಭಾಗೀರಥಿ ಚಿಕ್ಕಮ್ಮ ನಡೆದಾಡಿದಂತೆ ಕಾಣಿಸಿತು. ಶಶಿಧರ ಜೊತೆಗಿರಲಿಲ್ಲ.
ಮೈಯೆಲ್ಲ ಕಂಪಿಸಿದಂತಾಗಿ ಚಿರಾಯು ತಿರುಗಿ ನೋಡಿದ. ಮನೆಯೊಳಗೆ ಕತ್ತಲಿತ್ತು.

Friday, March 21, 2008

2. ಬರದೆ ಹೋದೆ ನೀನು

ಯಾಮಿನಿ ಬರಲಿಲ್ಲ.
ನಾಲ್ಕೇ ದಿನಕ್ಕೆ ಅಕ್ಕನ ಮದುವೆ. ಆಮೇಲೆ ಪ್ಯಾರಿಸ್ಸಿಗೆ ಹೋಗುವುದಿದೆ. ಗೆಳೆಯ ಹೋಗುತ್ತಿದ್ದಾನೆ. ಈ ಅವಕಾಶ ಬಿಟ್ಟರೆ ಮತ್ತೆ ಹೋಗುವುದಕ್ಕೆ ಆಗುವುದಿಲ್ಲ. ಪ್ಯಾರಿಸ್ಸಿನ ಮೇಲೆ ನನಗೇನೂ ಅಂತ ಮೋಹವಿಲ್ಲ. ಆದರೆ ಸೀನ್ ನದಿಯನ್ನೊಮ್ಮೆ ನೋಡಬೇಕು. ರಾಘವೇಂದ್ರ ಖಾಸನೀಸರ ಮೊನಾಲಿಸಾ ಕತೆಯನ್ನು ಓದಿದ ಮೇಲಂತೂ ಪ್ಯಾರಿಸ್ಸು ಮತ್ತಷ್ಟು ಹತ್ತಿರವಾಗಿದೆ. ಪ್ಲೀಸ್ ತಪ್ಪು ತಿಳೀಬೇಡ ಅಂತ ನಾನು ನಿನ್ನನ್ನು ಕೇಳಬೇಕಾಗಿಲ್ಲ. ನಾನು ಪರಸ್ಪರರ ಬಗ್ಗೆ ತಪ್ಪು ತಿಳಿಯಬಾರದು ಎಂದು ನಿರ್ಧರಿಸಿ ಬಹಳ ಕಾಲವಾಯಿತು. ಬಂದ ತಕ್ಷಣ ಬರುತ್ತೇನೆ ಅಂತ ಯಾಮಿನಿಯೇ ಫೋನಲ್ಲಿ ಮಾತಾಡಿದಳು. ಜಾಣೆ, ಮಾತಾಡುವ ಮೊದಲೇ ಎಸ್ಸೆಮ್ಮೆಸ್ಸು ಕಳುಹಿಸಿ ಮಾನಸಿಕವಾಗಿ ತನ್ನನ್ನು ಆ ಸುದ್ದಿಗೆ ಸಿದ್ಧಮಾಡಿಟ್ಟಿದ್ದಳು.
ಬರುವುದಿಲ್ಲ ಅಂತ ಗೊತ್ತಾದ ಮೇಲೆ ಏನು ಹೇಳಿದರೂ ಅದು ಬರೀ ನೆಪವಷ್ಟೇ. ಆ ನೆಪದಿಂದ ಇಬ್ಬರ ಮನಸ್ಸಿಗೂ ಸ್ವಲ್ಪ ಸಮಾಧಾನ ಆಗಬಹುದೇನೋ. ನೆಪ ಹೇಳಿಸಿಕೊಂಡವನಿಗಿಂತ ನೆಪ ಹೇಳಿದವಳಿಗೇ ಅದರಿಂದ ನೆಮ್ಮದಿ. ಆಕೆ ಈಗ ನಿರಾಳವಾಗಿದ್ದಾಳೆ. ಮುಂದೆ ಯಾವತ್ತಾದರೂ ಜಗಳ ಆದರೆ ಆವತ್ತು ನಾನು ನಿನಗೆ ಎಲ್ಲಾ ವಿವರವಾಗಿ ಹೇಳಿದ್ದೆ. ನಿನಗೆ ಅಷ್ಟು ಪ್ರೀತಿಯಿದ್ದರೆ ಆವತ್ತೇ ಸ್ಪಷ್ಟವಾಗಿ ಹೇಳಬೇಕಾಗಿತ್ತು-ನೀನು ಹೋಗಕೂಡದು ಅಂತ. ಹಾಗೆ ಕೇಳಿ ಕಟ್ಟಿಹಾಕಿಕೊಳ್ಳುವ ಧೈರ್ಯ ನಿನಗಿಲ್ಲ ಅಂತ ಮಾತು ತೆಗೆಯುತ್ತಾಳೆ.
ಯಾಮಿನಿ ಇಲ್ಲಿಗೆ ಬಂದಾದರೂ ಏನು ಮಾಡುವುದಿತ್ತು ಎಂದು ಚಿರಾಯು ಯೋಚಿಸಿದ. ಆಕೆ ಬಂದರೆ ಮತ್ತದೇ ಪ್ರೀತಿ, ತಬ್ಬುಗೆ, ಇಳಿಸಂಜೆಗಳಲ್ಲಿ ವಾಕಿಂಗು, ಸುಸ್ತಾಗಿ ಬಂದು ಮತ್ತೊಂದು ಸುತ್ತು ಪ್ರೀತಿ, ಮತ್ತೆ ಭಯಂಕರ ಸುಸ್ತು. ನಿದ್ದೆಯಿಂದ ಏಳುವ ಹೊತ್ತಿಗೆ ಯಾಮಿನಿ ವಾಕಿಂಗು ಹೋಗಿರುತ್ತಾಳೆ. ಮೊಬೈಲು ಫೋನ್ ಮಾಡಿದರೆ ಎಂಗೇಜು. ಆಕೆ ಬೆಳಗ್ಗೆ ವಾಕಿಂಗು ಹೋಗುವುದು ದೇಹದ ತೂಕ ಇಳಿಸುವುದಕ್ಕೋ ಮನಸ್ಸಿನ ಭಾರ ಇಳಿಸಿಕೊಳ್ಳುವುದಕ್ಕೋ ಎಂದು ಅನುಮಾನ. ಆದರೆ ಅದನ್ನು ಕೇಳುವಂತಿಲ್ಲ. ತನ್ನ ಭಾರತೀಯ ಮನಸ್ಸು ಅವಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಸಹಿಸಿಕೊಳ್ಳುವುದು ಸಾಧ್ಯವೇ ಇಲ್ಲ ಅಂತ ಚಿರಾಯುವಿಗೆ ಅನೇಕ ಸಾರಿ ಅನ್ನಿಸಿದ್ದಿದೆ. ಹೀಗಾಗಿ ಮತ್ತೆ ಮತ್ತೆ ಮನಸ್ಸಿಗೆ ಬರುವ ಮದುವೆಯ ಪ್ರಸ್ತಾಪವನ್ನು ಅವನೇ ತಳ್ಳಿ ಹಾಕುತ್ತಾನೆ. ಯಾಮಿನಿಯನ್ನು ಪ್ರೀತಿಸಬಹುದು, ಮುದ್ದಿಸಬಹುದು. ಆದರೆ ಅವಳನ್ನು ಮದುವೆಯಾಗಿ ಹೆಂಡತಿಯ ಸ್ಥಾನದಲ್ಲಿಟ್ಟು ನೋಡುವುದು ಸಾಧ್ಯವೇ ಇಲ್ಲ ಎಂದು ಅವನಿಗೆ ಅನೇಕ ಸಾರಿ ಅನ್ನಿಸಿದೆ.
ಹೆಂಡತಿ ಅಂದಾಗ ಅವನಿಗೆ ನೆನಪಾಗುವುದು ಶಿವಣ್ಣನ ಹೆಂಡತಿ ಮಾಲವಿಕಾ. ಇಷ್ಟಗಲ ಕುಂಕುಮ ಇಟ್ಟುಕೊಂಡು ತಾನುಟ್ಟ ಜರಿಸೀರೆಯ ಅಂಚನ್ನು ತಾನೇ ಮೆಚ್ಚುತ್ತಾ ಬನ್ನಿ ಅಂತ ಕರೆಯುವ ಆಹ್ವಾನದಲ್ಲಿ ಆಪ್ತವಾಗುತ್ತಾ, ಆ ಆಹ್ವಾನದಲ್ಲಿರುವುದು ಮಾದಕತೆಯೋ ಪ್ರೀತಿಯೋ ಗೌರವವೋ ಆದರವೋ ಆತ್ಮೀಯತೆಯೋ ಅನ್ನುವುದನ್ನು ಅವರವರ ಭಾವಕ್ಕೆ ಬಿಡುತ್ತಾ
ಮಾತಿನ ನಡುನಡುವೆ ಗಂಡನನ್ನು ಅತ್ಯಂತ ಸುಖೀ ಗೃಹಿಣಿಯಂತೆ ನೋಡುತ್ತಾ, ಅವನು ಬೈದಾಗ ಕಣ್ಣಲ್ಲೇ ಕ್ಷಮೆ ಕೇಳುತ್ತಾ, ಅವನು ತಪ್ಪು ಮಾಡಿದಾಗ ಛೇಡಿಸುತ್ತಾ, ತನಗೆ ಅವನು ಕೊಟ್ಟಂಥ ಸುಖವನ್ನು ಯಾರೂ ಕೊಡಲಾರರು, ಅವನಿಗೆ ನಾನು ಕೊಡುವ ಸುಖವನ್ನು ಜಗತ್ತಿನ ಯಾವ ಸುಖವೂ ಸರಿಗಟ್ಟಲಾರದು ಎಂಬಂತೆ ಓಡಾಡುವ ಮಾಲವಿಕಾ ಚಿರಾಯುವಿನ ಪಾಲಿಗೆ ಅಚ್ಚರಿ. ತನ್ನನ್ನು ಚಿರಾಯು ಸೂಕ್ಷ್ಮವಾಗಿ ಗಮನಿಸುತ್ತಾನೆ ಅಂತ ಗೊತ್ತಾದ ತಕ್ಷಣ ಅವಳು ಮತ್ತಷ್ಟು ಲವಲವಿಕೆ ತುಂಬಿಕೊಂಡಿದ್ದಳು. ಹಾಗಿದ್ದರೂ ಅವಳ ವರ್ತನೆಯಲ್ಲಿ ಪುಟ್ಟ ಮಗುವಿನ ಗುಣವೂ ಇದೆಯೇನೋ ಎಂದು ಅನುಮಾನಿಸುತ್ತಿದ್ದ ಚಿರಾಯು.
ಚಿರಾಯು ಹೀಗೆ ನಲುಗುವುದನ್ನು ಬರೆಯಲಾಗದೆ ಒದ್ದಾಡುವುದನ್ನು ಶೇಷು ಗಮನಿಸುತ್ತಾ ಕೂತಿದ್ದ. ತಾನಿಲ್ಲಿಂದ ಹೊರಟು ಬಿಡುತ್ತೇನೆ ಅಂತ ಅವನಿಗೆ ಅನ್ನಿಸೋದಕ್ಕೆ ಶುರುವಾಗಿರಬೇಕು ಅಂದುಕೊಂಡ ಚಿರಾಯು. ಹದಿನೈದು ವರುಷಗಳಿಂದ ತನ್ನ ಜೊತೆಗಿದ್ದಾನೆ. ತನ್ನ ಕಾಡುಹಂದಿಯಂಥ ವಿಚಿತ್ರ ಮತ್ತು ಅನೂಹ್ಯ ಆಲೋಚನೆಗಳು ಅವನಿಗೆ ಗೊತ್ತಾಗುತ್ತವೆ. ಯಾವಾಗ ತನ್ನ ಮುಂದೆ ನಿಲ್ಲಬೇಕು, ಯಾವಾಗ ಮಾತಾಡಬೇಕು, ಕಣ್ಸನ್ನೆ ಏನು ಹೇಳುತ್ತದೆ, ಮೈಮುರಿದರೆ ಏನರ್ಥ ಅನ್ನುವುದೆಲ್ಲ ಅವನಿಗೆ ಗೊತ್ತು. ಯಾವ ಹೆಂಡತಿಯೂ ಅರ್ಥ ಮಾಡಿಕೊಳ್ಳದಷ್ಟು ಚೆನ್ನಾಗಿ ತನ್ನನ್ನು ಅರ್ಥ ಮಾಡಿಕೊಂಡಿದ್ದಾನೆ ಅಂತ ಅನ್ನಿಸುವ ಹೊತ್ತಿಗೇ ಅದು ಅರ್ಥ ಮಾಡಿಕೊಂಡದ್ದಾ ಅವನ ಅನಿವಾರ್ಯತೆಯಾ ಎಂಬ ಪ್ರಶ್ನೆ ಎದುರಾಯಿತು. ಹೆಂಡತಿಗೆ ಸ್ವಂತದ್ದೊಂದು ವ್ಯಕ್ತಿತ್ವ ಇರುತ್ತೆ, ಇವನಿಗೆ ಅದಿರೋದಿಲ್ಲ. ವ್ಯಕ್ತಿತ್ವ ಇಲ್ಲದೇ ಇರುವವರು ಮಾತ್ರ ನಮ್ಮ ಅಹಂಕಾರಕ್ಕೆ ಹತ್ತಿರವಾಗಬಲ್ಲರು.
ಹಾಗಂತ ಹೊಳೆದದ್ದೇ ತಡ, ಅದನ್ನೊಂದು ಪಾತ್ರವಾಗಿಸಬಹುದೇನೋ ಎಂದುಕೊಂಡು ಚಿರಾಯು ಪುಟ್ಟ ಟಿಪ್ಪಣಿ ಗೀಚಿಕೊಂಡ.
ಪಕ್ಕದಲ್ಲೇ ತಾನು ಬರೆದಿಟ್ಟ ಐದು ಸಾಲುಗಳು ಮತ್ತೆ ಕಾಣಿಸಿದವು. ಅವುಗಳನ್ನು ಓದುತ್ತಿದ್ದಂತೆ ತುಂಬ ಕಳಪೆಯಾಗಿದೆ ಅನ್ನಿಸಿತು. ಮನಸ್ಸು ಮಾಡಿದರೆ ಅದಕ್ಕಿಂತ ತೀವ್ರವಾಗಿ ಬರೆಯುತ್ತೀಯಾ. ಇದರಲ್ಲೇನಿದೆ ಅಂತ ಯಾಮಿನಿ ಓದಿದ ತಕ್ಷಣ ಕಾಮೆಂಟ್ ಮಾಡುತ್ತಾಳೆ. ಇದನ್ನು ಅವಳಿಗೆ ತೋರಿಸುವುದೋ ಬೇಡವೋ ಫೋನ್ ಮಾಡಿ ಓದಿ ಹೇಳಿಬಿಡಲಾ..
ಚಿರಾಯು ಫೋನ್ ಕೈಗೆತ್ತಿಕೊಂಡ.
ಯಾಮಿನಿಯ ಫೋನ್ ಬಿಜಿಯಾಗಿತ್ತು.

Thursday, March 20, 2008

1. ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ....

ತುಂಬ ದೊಡ್ಡ ಗಾತ್ರದ ಮೊಲೆಗಳಿಗಿಂತ ಅಂಗೈಯೊಳಗೆ ಹಿಡಿಯಬಹುದಾದ ಗುಬ್ಬಚ್ಚಿಯಂಥ ಮೊಲೆಗಳೇ ಅನುಕೂಲಕರ ಮತ್ತು ಕ್ಷೇಮ ಎಂದು ಅರಿವಾಗುವ ಹೊತ್ತಿಗೆ ಜಯದೇವನಿಗೆ ನಲವತ್ತು ದಾಟಿದೆ. ಹಾಗಿದ್ದರೂ ದೊಡ್ಡ ಮೊಲೆಗಳ ಕುರಿತ ವ್ಯಾಮೋಹವನ್ನು ಕಳೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲವಲ್ಲ ಎಂದು ಅವನಿಗೆ ಸಂತೋಷವಾಗುವುದುಂಟು. ತಾನೆಲ್ಲಿ ವಿರಾಗಿಯಾಗಿಬಿಡುತ್ತೇನೋ ಎಂಬ ಭಯದಿಂದ ತನ್ನನ್ನು ಪಾರುಮಾಡುವುದೇ ಈ ಸ್ಥನಗಳೇನೋ ಎಂದು ಅನ್ನಿಸಿದಾಗೆಲ್ಲ ಅವನ್ನು ತಾನು ಮುಟ್ಟಿ ಮುದ್ದಿಸಿದ ಮೊಲೆಗಳ ಬಗ್ಗೆ ಕೃತಜ್ಞನಾಗುತ್ತಾನೆ.’
ಆರು ದಿನಗಳ ಹಿಂದೆ ತಾನೇ ಬರೆದಿಟ್ಟ ಐದು ಸಾಲುಗಳನ್ನು ಚಿರಾಯು ಮತ್ತೊಮ್ಮೆ ಓದಿದ. ಕಳೆದಾರು ದಿನಗಳಲ್ಲಿ ಆ ಸಾಲುಗಳನ್ನು ಅವನು ನೂರಾರು ಸಲ ಓದಿದ್ದಾನೆ. ಕಾದಂಬರಿ ಆ ಸಾಲುಗಳಿಂದಲೇ ಯಾಕೆ ಶುರುವಾಯಿತು ಅನ್ನುವ ಪ್ರಶ್ನೆಗೆ ಅವನಿಗೆ ಉತ್ತರ ಸಿಗಲಿಲ್ಲ. ಅಷ್ಟು ಶೃಂಗಾರಮಯವಾಗಿಯೋ ಲಜ್ಜೆಗೇಡಿಯಂತೆಯೋ ಬರೆಯುವುದು ನವ್ಯದ ಶೈಲಿಯಾಯಿತಲ್ಲವೇ? ಈಗ ತೀರ ಹೊಸತೆನಿಸುವಂತೆ ಬರೆಯಲು ಹೊರಟವನನ್ನು ನವ್ಯದ ಅದೇ ಹಳೆಯ ಗುಂಗು ಯಾಕೆ ಕಾಡಬೇಕು? ವಿಮರ್ಶಕರು ಅದನ್ನು ಒಪ್ಪುತ್ತಾರಾ? ಹೋಗಲಿ, ಓದುಗರಿಗೆ ಅದರಲ್ಲಿ ಆಸಕ್ತಿ ಹುಟ್ಟಲು ಸಾಧ್ಯವಾ? ಓದುಗರೂ ತುಂಬ ಬೆಳೆದಿರುತ್ತಾರೆ. ಮಾಧ್ಯಮಗಳು ಬಂದಿವೆ. ಏನು ಬೇಕಾದರೂ ನೋಡುವ, ಪಡೆಯುವ ಸ್ವಾತಂತ್ರ್ಯ ಇದೆ. ಹೆಣ್ಮಕ್ಕಳೂ ಮೊದಲಿನ ಹಾಗೆ ಒಳಗೊಳಗೇ ಬೆಂದು ಬಳಲುವುದಿಲ್ಲ. ಎಲ್ಲಾ ಹೇಳಿಕೊಂಡು ಮಾಡಿಕೊಂಡು ಸುಖವಾಗಿರುತ್ತಾರೆ. ಅಂಥದ್ದರಲ್ಲಿ..
ಬೇರೆ ಯಾರಿಂದ ಶುರುಮಾಡಬಹುದು ಎಂದು ಯೋಚಿಸುತ್ತಾ ದೂರದಲ್ಲಿ ಕಾಣಿಸುವ ಬೋಳು ಬೋಳು ಗುಡ್ಡದತ್ತ ಕಣ್ಣು ಹಾಯಿಸಿದ ಚಿರಾಯು. ತಾನು ನಲವತ್ತು ವರುಷಗಳ ಹಿಂದೆ ನೋಡಿದ ಹಾಗೇ ಈಗಲೂ ಇದೆ. ಅದೇ ಪಾಳು ಗುಡಿ, ಅದೇ ಒಂಟಿಮರ. ಇದ್ದಕ್ಕಿದ್ದಂತೆ ಆ ಮರದಡಿಯಲ್ಲಿ ವಿಜಯ ಲಕ್ಷ್ಮಿ ಕಾಣಿಸಿಕೊಳ್ಳುತ್ತಾಳೆ. ರೆಂಜೆ ಮರದಡಿಯಲ್ಲಿ ಹೂವು ಹೆಕ್ಕುವ ಜಾಹ್ನವಿ ಕಣ್ಮುಂದೆ ಮೂಡುತ್ತಾಳೆ. ಅದೇ ರೆಂಜೆ ಮರಕ್ಕೆ ನೇಣುಹಾಕಿಕೊಂಡು ಸತ್ತ ಶಾನುಭೋಗರ ಹೆಂಡತಿಯ ಹಸಿರು ಸೀರೆ ನೆನಪಿಗೆ ಬರುತ್ತದೆ. ಅಷ್ಟು ದಪ್ಪದ ಹೆಂಗಸು ಮರ ಹತ್ತಿ ನೇಣು ಹಾಕಿಕೊಂಡದ್ದಾದರೂ ಹೇಗೆ ಅನ್ನುವ ಪ್ರಶ್ನೆ ಆವತ್ತು ಯಾರನ್ನೂ ಕಾಡಿರಲೇ ಇಲ್ಲವಲ್ಲ ಅಂದುಕೊಳ್ಳುತ್ತಾ ಚಿರಾಯು ನೋಟ್‌ಪ್ಯಾಡ್ ಕೈಗೆತ್ತಿಕೊಂಡ.
ಚಿರಾಯುವಿಗೆ ಕಾದಂಬರಿ ಬರೆದು ಮುಗಿಸಲು ಬಾಕಿ ಉಳಿದಿರುವುದು ಇಪ್ಪತ್ತೆಂಟು ದಿನಗಳು ಮಾತ್ರ. ಅಷ್ಟರಲ್ಲಿ ಮುಗಿಸದೇ ಹೋದರೆ ಅಗ್ರಿಮೆಂಟ್ ಮುಗಿದುಹೋಗುತ್ತದೆ. ಒಪ್ಪಂದ ಮುರಿದುಹೋದರೆ ಪೆಂಗ್ವಿನ್ ಸಂಸ್ಥೆ ಕೊಟ್ಟಿರುವ ಆರು ಲಕ್ಷ ರುಪಾಯಿ ಅಡ್ವಾನ್ಸನ್ನು ವಾಪಸ್ಸು ಕೊಡಬೇಕು. ಅದಕ್ಕಿಂತ ದೊಡ್ಡ ನಷ್ಟವೆಂದರೆ ಒಪ್ಪಂದದ ಪ್ರಕಾರ ಬರಬೇಕಾದ ಇಪ್ಪತ್ತನಾಲ್ಕು ಲಕ್ಷ ರುಪಾಯಿಯೂ ಕೈ ಬಿಟ್ಟು ಹೋಗುತ್ತದೆ. ಹಾಗಂತ ಏನೇನೋ ಬರೆದು ಕೊಡುವಂತಿಲ್ಲ. ಅಂತಾರಾಷ್ಟ್ರೀಯ ಸಾಹಿತ್ಯ ವಲಯದಲ್ಲಿ ತನ್ನ ಕಾದಂಬರಿ ಚರ್ಚೆಯಾಗುತ್ತದೆ. ಹಾಗೆ ಚರ್ಚೆಗೆ ಬಂದಾಗ ತನ್ನ ಕಾದಂಬರಿ ಜಗತ್ತಿನ ಇತರೇ ಕಾದಂಬರಿಕಾರರ ಸಾಲಲ್ಲಿ ನಿಲ್ಲುವಂತಾಗಬೇಕು. ತನ್ನ ಸರೀಕರ ಎದುರು ತಾನು ನಿಕೃಷ್ಠ ಅನ್ನಿಸಿಕೊಳ್ಳಬಾರದು.
ವಿಚಾರವಾದ ಕಡಿಮೆ ಇರಲಿ, ರೋಚಕವಾದ ಘಟನೆಗಳಿರಲಿ,ಅವಮಾನಿತನಾದದ್ದು, ಪ್ರೇಮರಾಹಿತ್ಯ. ಹಿಂಸೆ, ಹೆಣ್ಣಿನ ಶೋಷಣೆ, ಹೆಣ್ಣು ಅನುಭವಿಸುವ ಯಾತನೆ, ಅವಳು ಸುಖಕ್ಕಾಗಿ ಹಾತೊರೆಯುವುದು, ಗಂಡಿನ ಅಹಂಕಾರವನ್ನು ಆಕೆ ಮೀರುವುದಕ್ಕೆ ಮಾಡುವ ಪ್ರಯತ್ನ - ಇವೆಲ್ಲ ಕಾದಂಬರಿಯಲ್ಲಿ ದಟ್ಟವಾಗಿ ಬರಲಿ. ಕಾದಂಬರಿಯನ್ನು ಜೀವಂತವಾಗಿಡುವುದು ಇಂಥ ಸಂಗತಿಗಳೇ. ಅವು ನಿಮ್ಮ ಅನುಭವವೇ ಆಗಿರಬೇಕು ಅಂಥೇನಿಲ್ಲ. ಯಾರ ಅನುಭವವಾದರೂ ಸರಿಯೇ, ಕಂಡದ್ದು, ಕೇಳಿದ್ದು ಎಲ್ಲಾ ಸೇರಿಸಿ ಬರೆಯಿರಿ. ಭಾರತೀಯತೆ ಮುಖ್ಯ. ನಿಮ್ಮ ಊರು, ನಿಮ್ಮ ನೆಲ, ನೆಲೆ ಅದರಲ್ಲಿ ಮೂಡಬೇಕಾದದ್ದು ಮುಖ್ಯ ಅಂತ ವಿವರಿಸಿದ್ದಳು ಶ್ರದ್ಧಾ. ಆಕೆ ಪೆಂಗ್ವಿನ್ ಇಂಡಿಯಾದ ಏಜಂಟು. ಒಳ್ಳೆಯ ಕಾದಂಬರಿಕಾರರನ್ನು ಹುಡುಕಿ ಅವರಿಂದ ಕಾದಂಬರಿ ಬರೆಸುವುದು ಅವಳ ಕೆಲಸ.
ಹಾಗಂತ ತನಗೇ ಬುದ್ಧಿ ಹೇಳಲಿಕ್ಕೆ ಬರುತ್ತಾಳಲ್ಲ, ಅವಳು ಹೇಳಿದ ಹಾಗೆ ಕಾದಂಬರಿ ಯಾಕೆ ಬರೀಬೇಕು ನಾನು ಎಂದು ಚಿರಾಯು ರೇಜಿಗಿಗೊಳ್ಳುತ್ತಾ ಎದ್ದು ನಿಂತ. ಅವನು ಎದ್ದು ನಿಂತದ್ದನ್ನು, ಚಡಪಡಿಸುತ್ತಿರುವುದನ್ನೂ, ಬರೆಯದೇ ಅರ್ಧ ದಿನ ಸುಮ್ಮನೆ ಕೂತಿದ್ದನ್ನೂ ಹೊರಗೆ ಕೂತು ನೋಡುತ್ತಿದ್ದ ಶೇಷು ಒಳಗೆ ಬಂದು ನಿಂತ. ಚಿರಾಯು ಕಣ್ಣಲ್ಲೇ ಸೂಚಿಸಿದ ಹಾಗೆ ಒಂದು ಲಾರ್ಜ್ ವಿಸ್ಕಿಗೆ ಸ್ವಲ್ಪ ಸೋಡ, ಸ್ವಲ್ಪ ನೀರು ಬೆರೆಸಿ ತಂದು ಅವನ ಕೈಲಿಟ್ಟ.
ಚಿರಾಯು ಮೊದಲ ಸಿಪ್ ಹೀರುತ್ತಾ ಶೇಷುವಿಗೋ ತನಗೋ ಎನ್ನುವುದು ಇನ್ನೂ ಸ್ವಷ್ಟವಾಗದವನಂತೆ ಹೇಳಿಕೊಂಡ:
ಯಾಮಿನಿಗೆ ಬರೋದಕ್ಕೆ ಹೇಳಬೇಕು.’